‘ದೇಸೀಮಾತು’ ಬ್ಲಾಗ್ ನ ದಿನೇಶ್ ಕುಮಾರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಹರಿತ, ನೇರ ಬರಹಗಳಿಂದ ಬ್ಲಾಗ್ ಅಂಗಳದಲ್ಲಿ ಸುದ್ದಿ ಮಾಡಿದ್ದ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.
ಬ್ಲಾಗ್ ಲೋಕದಲ್ಲಿ ಸಮಕಾಲೀನ ವಿಚಾರಗಳ ಚರ್ಚೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ದಿನೇಶ್ ದೇಸಿ ಮಾತು ಮೂಲಕ ಪ್ರವೇಶಿಸಿದರು. ಅವರ ಲೇಖನಗಳೆಲ್ಲವೂ ಚರ್ಚೆಗೆ ಒಳಗಾಗಿವೆ ಎನ್ನುವುದೇ ಅವರ ಬರಹಕ್ಕಿರುವ ಶಕ್ತಿಯನ್ನೂ ತೋರಿಸುತ್ತದೆ.
ಈ ಪುಸ್ತಕವನ್ನು ಬೆಂಗಳೂರು ಪ್ರೆಸ್ ಕ್ಲಬ್ ಹೊರತಂದಿದೆ. ಬ್ಲಾಗ್ನ ಬರಹಗಳೊಂದಿಗೆ ಕೆಲವು ತಾಜಾ ಬರಹಗಳೂ ಇವೆ. ನಾಳೆ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ. ‘ದೇಸಿ ಮಾತು’ಗೆ ಡಾ.ಶತೇಂದ್ರ ಕುಮಾರ್ ಬರೆದ ಬೆನ್ನುಡಿಯ ಆಯ್ದ ಸಾಲುಗಳು ಇಲ್ಲಿವೆ-
ಪತ್ರಕರ್ತ ಎಸ್.ಸಿ.ದಿನೇಶ್ ಕುಮಾರ್ ಅವರ ದೇಸೀಮಾತು ಕೃತಿ ಹಲವು ದೃಷ್ಟಿಯಲ್ಲಿ ಮಹತ್ವದ ಕೃತಿ. ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಾಗಿಸುವ ಇಲ್ಲಿನ ಲೇಖನಗಳು ನಮ್ಮ ವರ್ತಮಾನದ ತಲ್ಲಣಗಳನ್ನು ಹಸಿಹಸಿಯಾಗಿ ಧ್ವನಿಸುತ್ತವೆ. ಮತಾಂಧತೆ, ಮಠಾಧೀಶರ ಕಪಟಗಳು, ಕಾರ್ಪರೇಟ್ ಸಂಸ್ಕೃತಿಯ ವೈರುಧ್ಯಗಳು, ಹಿಂದುಳಿದವರ ಸಮಸ್ಯೆಗಳು, ಸಮೂಹಮಾಧ್ಯಮಗಳ ಗೋಸುಂಬೆತನ, ಕನ್ನಡತನದ ಪ್ರಶ್ನೆಗಳು ಇಲ್ಲಿನ ಲೇಖನಗಳಲ್ಲಿ ಚರ್ಚೆಗೆ ಒಳಗಾಗಿವೆ.
ದಿನೇಶ್ ಅವರು ಮೂಲತಃ ಕವಿ, ಭಾವಜೀವಿ. ಪತ್ರಿಕಾರಂಗದ ಚೌಕಟ್ಟಿಗೆ ಒಳಪಟ್ಟು ಅವರೊಳಗಿನ ಕವಿ ತನ್ನ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡಂತೆ ಕಾಣುತ್ತಾನೆ. ಅವರ ಗದ್ಯ ಬರವಣಿಗೆ ಸರಳ, ಸ್ಪಷ್ಟ ಹಾಗು ನೇರವಾಗಿ ಎದೆಗೆ ತಾಕುವಂಥದ್ದು. ಇಲ್ಲಿ ಅತಿರಂಜಕತೆ, ಜಟಿಲ ವಾಕ್ಯಸಂಯೋಜನೆ, ಅಸ್ಪಷ್ಟ ಅಭಿವ್ಯಕ್ತಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತನಗೆ ಅನಿಸಿದ್ದನ್ನು ನೇರವಾಗಿ, ರಮ್ಯ ಉಪಮೆಗಳ ನೆರವಿಲ್ಲದೆ ಹೇಳುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಹೀಗಾಗಿ ಇಲ್ಲಿನ ಲೇಖನಗಳು ಪಂಡಿತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗನಿಗೂ ಸುಲಭವಾಗಿ ತಲುಪುತ್ತವೆ.
ಅವಧಿಗೆ,
ಕೃತಜ್ಞತೆಗಳು.
ಅವಧಿಯ ಎಲ್ಲ ಓದುಗರಿಗೂ ನಾಳಿನ ಕಾರ್ಯಕ್ರಮಕ್ಕೆ ನಲ್ಮೆಯ ಸ್ವಾಗತ.
-ದಿನೇಶ್ ಕುಮಾರ್ ಎಸ್.ಸಿ.
dear Avadhi readers,
A day ago I had invited all of you to attend
release of my book, scheduled on Saturday in Press Club premises.
The Press Club has postponed the function
citing technical reasons. There will be no programme
on Saturday evening.
– dinesh